ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ; ನಿರೂಪಕಿ ಅಪರ್ಣಾ ಪಂಚಭೂತಗಳಲ್ಲಿ ಲೀನ! ಕುಟುಂಬಸ್ಥರು, ಆಪ್ತರು, ಚಿತ್ರರಂಗದ ಗಣ್ಯರು ಸೇರಿ ನೂರಾರು ಜನರ ಸಮ್ಮುಖದಲ್ಲಿ ಪೊಲೀಸ್‌ ಗೌರದೊಂದಿಗೆ, ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ನಡೆಯಿತು. ಬೆಂಗಳೂರು: ಶ್ವಾಸಕೋಶ ಕ್ಯಾನ್ಸರ್‌ನಿಂದ ನಿಧನರಾದ ಖ್ಯಾತ ನಿರೂಪಕಿ, ನಟಿ ಅಪರ್ಣಾ ಅವರ ಅಂತ್ಯಸಂಸ್ಕಾರ ಬನಶಂಕರಿ ವಿದ್ಯುತ್ ಚಿತಾಗಾರದಲ್ಲಿ ನೆರವೇರಿತು.ಕುಟುಂಬಸ್ಥರು, ಆಪ್ತರು, ಚಿತ್ರರಂಗದ ಗಣ್ಯರು ಸೇರಿ ನೂರಾರು ಜನರ ಸಮ್ಮುಖದಲ್ಲಿ ಪೊಲೀಸ್‌ ಗೌರದೊಂದಿಗೆ, ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ನಡೆಯಿತು.ಇದಕ್ಕೂ ಮುನ್ನ ಬನಶಂಕರಿಯ ಅಪರ್ಣಾ ಅವರ ಸ್ವಗೃಹದಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಸಪ್ತ ಸಾಗರದಾಚೆ ಎಲ್ಲೋ ಹಾಡಿನ ಮೂಲಕ ಚಿತ್ರರಂಗದ ಆಪ್ತರು ಕಣ್ಣೀರ ವಿದಾಯ ಹೇಳಿದರು.ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಮುನಿರತ್ನ, ನಟ ಶ್ರೀನಾಥ್, ರಾಘವೇಂದ್ರ ರಾಜಕುಮಾರ್‌, ತೇಜಸ್ವಿನಿ ಅನಂತಕುಮಾರ್, ರಮೇಶ್‌ ಅರವಿಂದ್‌, ವಿನಯ್‌ ರಾಜಕುಮಾರ್‌, ನಿರೂಪಕಿ ಶ್ವೇತಾ ಚೆಂಗಪ್ಪ, ಬ್ರಹ್ಮಾಂಡ ಗೂರೂಜಿ ನರೇಂದ್ರ ಬಾಬು ಶರ್ಮಾ, ಇಂದ್ರಜಿತ್‌ ಲಂಕೇಶ್‌, ಮಂಡ್ಯ ರಮೇಶ್‌, ತಾರಾ ಸೇರಿ ಚಿತ್ರರಂಗ, ರಾಜಕೀಯ ನಾಯಕರು ಸೇರಿ ವಿವಿಧ ಗಣ್ಯರು ಅಂತಿಮ ದರ್ಶನ ಪಡೆದರು.ಸೃಜನ್ ಲೋಕೇಶ್ ಹಾಗೂ ಕುಟುಂಬಸ್ಥರು ಅಂತ್ಯಸಂಸ್ಕಾರದ ವೇಳೆ ಭಾಗಿಯಾಗಿದ್ದರು. ಈ ವೇಳೆ ಅಪರ್ಣ ಪತಿ ನಾಗರಾಜ್‌ಗೆ ಸೃಜನ್ ಲೋಕೇಶ್ ಸಾಂತ್ವನ ಹೇಳಿದರು.ಬಳಿಕ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಬನಶಂಕರಿಯ ವಿದ್ಯುತ್ ಚಿತಾಗಾರಕ್ಕೆ ತೆಗೆದುಕೊಂಡು ಹೋಗಲಾಯಿತು. ನಂತರ ಮೂರು ಸುತ್ತು ಕುಶಾಲತೋಪು ಸಿಡಿಸಿ ಪೊಲೀಸರು ಗೌರವ ಸಲ್ಲಿಸಿದರು. ಸ್ಮಾರ್ತ ಸಂಪ್ರದಾಯ (ಹೊಯ್ಸಳ ಕರ್ನಾಟಕ ಭಾಗ)ದ ಪ್ರಕಾರ ಅಪರ್ಣಾ ಅಂತ್ಯಕ್ರಿಯೆ ನೆರವೇರಿತು.ಚಿಕ್ಕಮಗಳೂರಿನ ಪಂಚನಹಳ್ಳಿ ಗ್ರಾಮದ ಅಪರ್ಣಾ ಕನ್ನಡ ಕುಲಕೋಟಿಗೆ ಹತ್ತಿರವಾಗಿದ್ದು ತಮ್ಮ ಸುಮಧುರ ಮಾತುಗಳಿಂದ. ಯಾವುದಾದರೂ ಕಾರ್ಯಕ್ರಮವನ್ನು ಅಪರ್ಣಾ ನಿರೂಪಣೆ ಮಾಡುತ್ತಿದ್ದಾರೆ ಎಂದರೆ, ಅಲ್ಲಿ ಕನ್ನಡ ಪದಗಳು ನಲಿದಾಡುತ್ತಿದ್ದವು. ಕನ್ನಡ ಮನಸ್ಸುಗಳನ್ನು ತಮ್ಮ ಮಾತುಗಳಿಂದಲೇ ಆಕರ್ಷಿಸಿದ್ದ ಧ್ವನಿ ಅಪರ್ಣಾ ಅವರದ್ದು. 'ನಮ್ಮ ಮೆಟ್ರೋ ಸೇರಿದಂತೆ ಅನೇಕ ಕಡೆ ಬರುವ ಅನೌನ್ಸ್‌ಮೆಂಟ್ ಅಪರ್ಣಾರದ್ದು. ನಿರೂಪಣೆಗೆ ಹೊಸ ಮೆರುಗು ತಂದುಕೊಟ್ಟಿದ್ದ ಅಪರ್ಣಾ ಇನ್ನು ನೆನಪು ಮಾತ್ರ.ಪುಟ್ಟಣ್ಣ ಕಣಗಾಲ್ ಅವರ ’ಮಸಣದ ಹೂವು’ ಸಿನೆಮಾದ ಮೂಲಕ 1984ರಲ್ಲಿ ಬೆಳ್ಳಿತೆರೆಗೂ ಪದಾರ್ಪಣೆ ಮಾಡಿದರು. ಈ ಸಿನೆಮಾದ ಪಾರ್ವತಿ ಪಾತ್ರ ಜನಪ್ರಿಯತೆ ಪಡೆದಿತ್ತು. ಆನಂತರ ಇನ್ಸ್‌ಪೆಕ್ಟರ್ ವಿಕ್ರಮ್ಸಂ ಗ್ರಾಮ, ನಮ್ಮೂರ ರಾಜ, ಸಾಹಸ ವೀರ, ಡಾಕ್ಟರ್ ಕೃಷ್ಣ ಸೇರಿ ಹಲವು ಚಿತ್ರಗಳಲ್ಲಿ ನಟನೆ ಮಾಡಿದರು. ೯೦ರ ದಶಕದಲ್ಲಿ ಚಂದನ ವಾಹಿನಿಯಲ್ಲಿ ಮೂಡಿಬಂದ ಹಲವು ಕಾರ್ಯಕ್ರಮಗಳ ನಿರೂಪಣೆ ಮಾಡಿದ ನಂತರ ಭಾರತ ಸರ್ಕಾರದ ವಿವಿಧ ಭಾರತಿಯಲ್ಲಿ ರೇಡಿಯೋ ಜಾಕಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. ಇತ್ತೀಚೆಗೆ ತೆರೆಕಂಡ ’ಗ್ರೇ ಗೇಮ್ಸ್’ ಎಂಬ ಸಿನಿಮಾದಲ್ಲಿ ಕೊನೆಯದಾಗಿ ನಟಿಸಿದ್ದರು.2012ರಲ್ಲಿ ಬಿಗ್ ಬಾಸ್ ಕನ್ನಡದ ಮೊದಲ ಸೀಸನ್ ನ ಸ್ಪರ್ಧೆಯಾಗಿದ್ದರು. 2015 ರಲ್ಲಿ ಸೃಜನ್ ಲೋಕೇಶ್ ನೇತೃತ್ವದಲ್ಲಿ ಆರಂಭವಾದ ‘ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಪಾತ್ರ ಮಾಡಿದ್ದರು.2014ರಲ್ಲಿ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಘೋಷಣೆಯಾಗುವ ’ಪ್ರಯಾಣಿಕರು ಹತ್ತುವ ಮತ್ತು ಇಳಿಯುವ ಸೂಚನೆ’ಗೆ ಧ್ವನಿ ನೀಡಿದ್ದರು.